• +91 9448039075 / +91 9480576501
  • Deshak Complex, Main Road Sedam, Gulbarga Dist.

ಬದುಕು ಅರಳಿಸಿದ ಚೆಂಡು ಹೂವು ಬದುಕು ಅರಳಿಸಿದ ಚೆಂಡು ಹೂವು

ಇರುವ ಅಲ್ಪ ಜಮೀನಿನಲ್ಲಿ ದೀರ್ಘ ಅವಧಿಯಿಂದ ಚೆಂಡು ಹೂವು ಬೆಳೆಯುತ್ತಿರುವ ರೈತ ವಿಲಾಸ ವಿರೂಪಾಕ್ಷಿ ಗುಂಡಪ್ಪಗೋಳ ಆದಾಯದ ನೆಮ್ಮದಿ ಕಂಡಿದ್ದಾರೆ.

ಇರುವ ಅಲ್ಪ ಜಮೀನಿನಲ್ಲಿ ದೀರ್ಘ ಅವಧಿಯಿಂದ ಚೆಂಡು ಹೂವು ಬೆಳೆಯುತ್ತಿರುವ ರೈತ ವಿಲಾಸ ವಿರೂಪಾಕ್ಷಿ ಗುಂಡಪ್ಪಗೋಳ ಆದಾಯದ ನೆಮ್ಮದಿ ಕಂಡಿದ್ದಾರೆ.

ವಿಲಾಸ ಅವರು ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಯುವ ಕೃಷಿಕರು. ಪದವಿ ಶಿಕ್ಷ ಣ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ. ತಮ್ಮ 6 ಎಕರೆ ಜಮೀನಿನಲ್ಲಿ ಬೆಳೆಯುತ್ತಿದ್ದ ಸಾಂಪ್ರದಾಯಿಕ ಬೆಳೆಗಳಾದ ಕಬ್ಬು, ಗೋವಿನ ಜೋಳದ ಜತೆಗೆ ಕೇವಲ 30 ಗುಂಟೆ ಪ್ರದೇಶದಲ್ಲಿ ಚೆಂಡು ಹೂ ಬೆಳೆದು ನಾಲ್ಕು ತಿಂಗಳ ಅವಧಿಯಲ್ಲಿ ಖರ್ಚು ಕಳೆದು 3 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

6 ಎಕರೆ ಜಮೀನಿನಲ್ಲಿ ಒಂದು ತೆರೆದ ಬಾವಿ ಹಾಗೂ ಎರಡು ಕೊಳವೆ ಬಾವಿಗಳಿವೆ. ಅಲ್ಲದೇ ಘಟಪ್ರಭಾ ಎಡದಂಡೆ ಸಮೀಪದಲ್ಲಿರುವುದರಿಂದ ನೀರಿನ ಕೊರತೆ ಇಲ್ಲ. ಆದರೂ, ಸಂಪೂರ್ಣ ಜಮೀನಿಗೆ ಹನಿ ನೀರಾವರಿ ಅಳವಡಿಸಿದ್ದಾರೆ.

ಕಂದಾಯ ಇಲಾಖೆ ನೌಕರರಾಗಿದ್ದ ತಂದೆ 2005ರಲ್ಲಿ ನಿಧನರಾದರು. ಅನುಕಂಪದ ಆಧಾರದಲ್ಲಿ ಸಹೋದರ ಮಾಧವಾನಂದ ಸರಕಾರಿ ನೌಕರಿ ಸೇರಿದರು. ಹೀಗಾಗಿ ಅವರು ಶಿಕ್ಷ ಣ ಮೊಟಕುಗೊಳಿಸಿ ಕೃಷಿಗೆ ಇಳಿದರು. ಆರಂಭದಲ್ಲಿ ಅವರು ವಾಣಿಜ್ಯ ಬೆಳೆಗಳಾದ ಕಬ್ಬು, ಗೋವಿನ ಜೋಳ ಹಾಗೂ ಬಾಳೆ ಬೆಳೆಯುತ್ತಿದ್ದರು.

ಅಲ್ಪಾವಧಿ ಬೆಳೆ: 2004-2005ರ ಅವಧಿಯಲ್ಲಿ ಅಲ್ಪಾವಧಿ ಬೆಳೆಗಳ ಬಗ್ಗೆ ಅವರಿಗೆ ಆಸಕ್ತಿ ಬಂತು. ಚೆಂಡು ಹೂವು ಬೆಳೆಯಲು ನಿರ್ಧರಿಸಿದರು. ತಮ್ಮ ಗ್ರಾಮದಲ್ಲಿ ಚೆಂಡು ಹೂ ಬೆಳೆಯುತ್ತಿದ್ದ ಪ್ರಗತಿಪರ ರೈತರಾದ ವಿಠ್ಠಲ ಪಾಟೀಲ, ಬಸವಂತ ಕಮತಿ, ರಾಜು ಬೈರುಗೋಳ, ಮಾರುತಿ ಎಣ್ಣಿ ಹಾಗೂ ಮಹಾದೇವ ಸೌಸುದ್ದಿ ಅವರಿಂದ ಚೆಂಡು ಹೂವು ಬೆಳೆಯ ಮಾಹಿತಿ ಪಡೆದರು. ಇದಾದ ಬಳಿಕ 14 ವರ್ಷಗಳ ಕಾಲ ನಿರಂತರವಾಗಿ ಒಂದು ಅವಧಿಗೂ ಬಿಡದೆ ಪ್ರತಿ ವರ್ಷ ಚೆಂಡು ಹೂ ಬೆಳೆಯುತ್ತಲೆ ಇದ್ದಾರೆ. ಚೆಂಡು ಹೂವು ಬೆಳೆಯುವಲ್ಲಿ ಇವರ ಅಳಿಯಂದಿರ ಶ್ರವå ಕೂಡಾ ತುಂಬಾ ಇದೆ. ಅದು ಅಲ್ಲದೇ ಕಬ್ಬಿನ ಬೆಳೆಯಲ್ಲಿ ಚೆಂಡು ಹೂವನ್ನು ಮಿಶ್ರ ಬೆಳೆಯಾಗಿಯೂ ಬೆಳೆಯುತ್ತಾರೆ.

ಬೆಳೆ ಆರಂಭಿಸುವುದಕ್ಕೂ ಮೊದಲು ಅವರು ಭೂಮಿಯನ್ನು ನೇಗಿಲನಿಂದ ಹದವಾಗಿ ಉಳುಮೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಕುತ್ತಾರೆ. ಆನಂತರ ಮಳೆಗಾಲದ ಅವಧಿಯಲ್ಲಿ ಸಾಲಿನಿಂದ ಸಾಲಿಗೆ 5 ಅಡಿಗಳ ಅಂತರದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ಸಾಲಿನಿಂದ ಸಾಲಿಗೆ 4 ಅಡಿಗಳ ಅಂತರದಲ್ಲಿ ಸಾಲು ಮಾಡಿ ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಲ್ಲಿ ಗಿಡ ನಾಟಿ ಮಾಡುತ್ತಾರೆ. ಮಳೆಗಾಲದಲ್ಲಿ ಎಕರೆಗೆ ಸುಮಾರು ನಾಲ್ಕು ಸಾವಿರ ಹಾಗೂ ಬೇಸಿಗೆ ಕಾಲದಲ್ಲಿ ಎಕರೆಗೆ ಸುಮಾರು ಐದು ಸಾವಿರ ಸಸಿ ನಾಟಿ ಮಾಡುತ್ತಾರೆ. ನಾಟಿ ನಂತರ ಕಾಲ ಕಾಲಕ್ಕೆ ರಾಸಾಯನಿಕ ಗೊಬ್ಬರ ಹಾಗೂ ಬೆಳೆ ಬೆಳವಣಿಗೆಗೆ ಶಿಫಾರಸಿದ ಔಷಧ ಸಿಂಪಡಿಸುತ್ತಾರೆ. ಹನಿ ನೀರಾವರಿ ಪದ್ಧತಿಯಿಂದ ನೀರು ಉಣಿಸುತ್ತಾರೆ.

ಬೆಳೆ ನಿರ್ವಹಣೆ: ಸಸಿ ನಾಟಿ ಮಾಡಿದ 45 ದಿನಗಳ ನಂತರ ಹೂವು ಬಿಡಲು ಪ್ರಾರಂಭವಾಗುತ್ತವೆ. ಒಳ್ಳೆಯ ಬೆಳೆ ಬಂದರೆ ಸುಮಾರು ಎರಡುವರೆ ತಿಂಗಳುಗಳವರೆಗೆ ಹೂವನ್ನು ಕಟಾವು ಮಾಡಬಹುದು. ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಹೂ ಕಟಾವು ಮಾಡಲಾಗುತ್ತದೆ. ಸರಾಸರಿ ಒಂದು ಗಿಡಕ್ಕೆ 2 ಕೆಜಿಯಂತೆ ಒಂದು ಎಕರೆಗೆ 8 ರಿಂದ 10 ಟನ್‌ ಚೆಂಡು ಹೂ ಸಿಗುತ್ತದೆ. ಪ್ರತಿ ಎಕರೆಗೆ ಸಸಿ, ಗೊಬ್ಬರ, ಔಷಧ ಹಾಗೂ ಕೂಲಿ ವೆಚ್ಚ ಸೇರಿ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ. 12 ರಿಂದ 14 ತಿಂಗಳ ಅವಧಿಯವರೆಗೆ ಬೆಳೆಯುವ ಕಬ್ಬಿನ ಬೆಳೆಗಿಂತ ಚೆಂಡು ಹೂವು ಬೆಳೆ ಅವರಿಗೆ ಉತ್ತಮ ಆದಾಯ ನೀಡುತ್ತಿದೆ.

”ನಾವು ಕೆಲವು ವರ್ಷಗಳ ಕಾಲ ಚೆಂಡು ಹೂವು ಬೆಳೆದು ಅನಂತರ ಹೂವು ಬೆಳೆಯುವದನ್ನೇ ಬಿಟ್ಟಿವು. ಆದರೆ ವಿಲಾಸ ಗುಂಡಪ್ಪಗೋಳ ಲಾಭ ಎಷ್ಟೇ ಇರಲಿ ಪ್ರತಿ ವರ್ಷ ಚೆಂಡ ಹೂವು ಬೆಳೆಯುತ್ತಾರೆ. ನಮ್ಮ ಗ್ರಾಮ ಗುಂಡಪ್ಪಗೋಳ ಅವರ ಹೊಲದಲ್ಲಿ ಸದಾ ಚೆಂಡು ಹೂವು ಇದ್ದೇ ಇರುತ್ತದೆ” ಎಂಬುದು ಗ್ರಾಮದ ರೈತರ ಅಭಿಮತ.

”ಕಬ್ಬು ದೀರ್ಘಾವಧಿ ಬೆಳೆ. ಪ್ರಕೃತಿ ವಿಕೋಪ, ಬೇಸಿಗೆಯಲ್ಲಿ ನೀರಿನ ಕೊರತೆ, ಅವೈಜ್ಞಾನಿಕ ಬೆಲೆ ಮೊದಲಾದ ಕಾರಣಗಳಿಂದಾಗಿ ಕಬ್ಬು ಬೆಳೆ ನಿರೀಕ್ಷಿತ ಆದಾಯ ತಂದುಕೊಡುತ್ತಿಲ್ಲ. ಇದರಿಂದಾಗಿ ಪರ್ಯಾಯ ಬೆಳೆ ಬೆಳೆಯುವ ನಿಟ್ಟಿನಲ್ಲಿ ಬೆಳೆದಿರುವ ಚೆಂಡು ಹೂವು 14 ವರ್ಷಗಳಿಂದ ನಿರಂತರವಾಗಿ ಆದಾಯ ಕೊಡುತ್ತಿದೆ” ಎನ್ನುತ್ತಾರೆ ಕೃಷಿಕ ವಿಲಾಸ ಗುಂಡಪ್ಪಗೋಳ.

ಮುಂಬಯಿ ಮಾರುಕಟ್ಟೆ: 
ಚೆಂಡು ಹೂವಿಗೆ ಮುಂಬಯಿ ಮತ್ತು ಹೈದ್ರಾಬಾದ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ವಿಲಾಸ್‌ ಅವರು ಮುಂಬಯಿಯ ದಾದರ್‌ ಮಾರುಕಟ್ಟೆಗೆ ಹೂವುಗಳನ್ನು ಕಳಿಸುತ್ತಾರೆ. ದರಗಳ ವ್ಯತ್ಯಾಸಗಳನ್ನು ಸರಾಸರಿ ತೆಗೆದರೆ ಪ್ರತಿ ಕೆಜಿಗೆ 70ರಿಂದ 80 ರೂ. ಸಿಗುತ್ತದೆ. ಜೂನ್‌ ತಿಂಗಳಲ್ಲಿ ದಾದರ್‌ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 100 ರೂ. ದರ ಸಿಕ್ಕಿದ್ದು ವಿಶೇಷ.

Post Your Comment